Bradbury, Ray pedestrian ಕತೆಯ ಅನುವಾದ 'ಪಾದಚಾರಿ' ನನ್ನ version..,

ಪಾದಚಾರಿ ಮಾರ್ಗದಲ್ಲಿ ಆತ ಸಾಗುತ್ತಿದ್ದ., ಪೋಲಿಸರಿಬ್ಬರು ಆತನನ್ನು ತಡೆದರು. ಆತ ಯಾರು ಏನು ಎಂಬ ಹಲವು ಪ್ರಶ್ನೆಗಳನ್ನು ಕೇಳಿದ ನಂತರ ಆತ  ಮಾನಸಿಕ ಅಸ್ವಸ್ಥ  ಎಂಬ ಹಣೆ ಪಟ್ಟಿ ಹಚ್ಚಿ ಮಾನಸಿಕ ಆಸ್ಪತ್ರೆಗೆ ಸಾಗಿಸಿದರು.

ಹಿನ್ನೆಲೆ : ಲಿಯೋನರ್ಡ್ ಮೀಡ್ ನಿಗೆ ಸಂಜೆಗತ್ತಲಲ್ಲಿ ನಿರ್ಮಾನುಷ ಬೀದಿಗಳಲ್ಲಿ ಸುತ್ತಾಡುವ ಆಸೆ. ಆತನಿಗೆ ಕುಳಿರ್ಗಾಳಿಗೆ ಮೈ ಒಡ್ಡಿ ನಡೆಯುವುದೇ ಒಂದು ಹಿತ. ಆದರೆ ಯಾವ ಮನುಷ್ಯ ಪ್ರಾಣಿಗಳೂ ಸಹ ಸೂರ್ಯಾಸ್ತದ ನಂತರ ಮನೆಯಿಂದ ಕಾಲಿಡುವ ಕಾಲವೇ ಅದಾಗಿರಲಿಲ್ಲ. ಸಂಜೆಯ ನಂತರ ಟೀವಿ ನೋಡುತ್ತಾ ಕಳೆಯುವುದೇ ಸಹಜವೆನ್ನುವ ವಾತಾವರಣ ಸೃಷ್ಟಿಯಾಗಿತ್ತು. ಜನರು ತಮ್ಮ ಸೃಜನಶೀಲತೆಯನ್ನು ಮರೆತು ಯಾರದೋ ಕಲ್ಪನೆಯ ಕೂಸಿನ ಸೀರಿಯಲ್ಲುಗಳನ್ನ ನೋಡಿ ಆನಂದಿಸುತ್ತಿದ್ದರು. ಮುಗೀತು ಮುಗೀತು ಅಂದರೂ ಮುಗಿಯದ ಕೋರ್ಟ್ ಸೀನುಗಳನ್ನು ನೋಡಿ ಸೀನುತ್ತಿದ್ದರು, ಆಕಳಿಸುತ್ತಿದ್ದರು.

ಈ ಹಿಂದೆ ಮೀಡ್ ನ ಅಜ್ಜ ಆತ ಸಣ್ಣವನಿದ್ದಾಗ ಹೇಳಿದ ಕತೆಯ ಪ್ರಕಾರ ಮೀಡ್ ನ  ಅಜ್ಜನ ಕಾಲದಲ್ಲಿ ಜನ ನಡೆದುಕೊಂಡೇ ಓಡಾಡುತ್ತಿದ್ದರು, ವಾಹನಗಳ, ಲಿಫ್ಟುಗಳ ಮೇಲೆ ಅವಲಂಬಿತರಾಗದೇ ಸಿಟಿ ಬಸ್ಸುಗಳಲ್ಲಿ, ಟ್ರೈನ್ ಗಳಲ್ಲಿ ನೇತಾಡದೆ ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ಸಾಗುತ್ತಿದ್ದರು. ಆದ್ರೆ ಮೀಡ್ ನು ಬದುಕುತ್ತಿರುವ ಈ ಕಾಲದಲ್ಲಿ ಜನ ನಡೆಯುವುದೇ ಇಲ್ಲ. ಬೊಜ್ಜಿಗೆ, ರೋಗಗಳಿಗೆ ಮದ್ದಿದೆ ಹಾಗು ಮದ್ದಿಗೆ ಜನರ ಬಳಿ ದುಡ್ಡಿದೆ. ಜನರು ತಮ್ಮ ಅವಯವಗಳಿಂದ ಬೆವರು ಸುರಿಸಲು ಪ್ರತ್ಯೇಕ ಯಂತ್ರಗಳನ್ನು ಇಟ್ಟುಕೊಂಡಿರುತ್ತಾರೆ ಹಾಗು ಅವುಗಳನ್ನು ಕೊಂಡು ತಂದ ಮೊದಲ ಎರಡು ದಿನಗಳ ಕಾಲ ಉಪಯೋಗಿಸಿ ಅಟ್ಟದ ಮೇಲೆ ಅಲಂಕಾರಕ್ಕಾಗಿ ಇಟ್ಟಿರುತ್ತಾರೆ.

ಮೀಡ್ ನ ಅಜ್ಜನ ಕಾಲದಲ್ಲಿ ಜನರು ವಾಕಿಂಗ್ ಗಾಗಿ ಮಾರುದ್ದ ಕೋಲಿನ ಜೊತೆಗೆ ಮನೆ ಬಿಡುತ್ತಿದ್ದರು ಹಾಗು ಮನೆಗೆ ಮರಳುವಾಗ ಅವರಿವರ ಮನೆಯ ಹೂ ಗಿಡಗಳಿಂದ ಕದ್ದು ತಂದ ಹೂಗಳನ್ನು ದೇವರಿಗೆ ಸಮರ್ಪಿಸುತ್ತಿದ್ದರು ಆದರೆ ಈಗ ಮೀಡ್ ನ ಕಾಲದಲ್ಲಿ ಜನ ಪ್ಲಾಸ್ಟಿಕ್ ಹೂಗಳನ್ನು ಫೋಟೋಗಳಿಗೆ ಏರಿಸಿ ಸುಗಂಧಕ್ಕಾಗಿ ಅಗರಬತ್ತಿಗಳನ್ನು ಉರಿಸುತ್ತಾರೆ. ಬಟ್ಟೆ ಒಗೆಯುವುದೂ ಸೇರಿದಂತೆ ದೈಹಿಕ ವ್ಯಾಯಮಗಳೂ ಇಲ್ಲದೆ ಇರುವಂತೆ ಯಂತ್ರಗಳು ಕಾರ್ಯ ನಿರ್ವಹಿಸುತ್ತದೆ. ಸೊಳ್ಳೆ ಹೊಡೆಯಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಸೊಳ್ಳೆಗಳನ್ನು ಸಾಯಿಸುವ ರಾಸಾಯನಿಕಗಳನ್ನು ಉರಿಸುತ್ತಾರೆ.

ಜನರು ತಮ್ಮಿಂದ ಸಾಧ್ಯವಾಗದ ತುಂಬಿದ ಕುಟುಂಬಗಳನ್ನು ಧಾರಾವಾಹಿಗಳಲ್ಲಿ ನೋಡಿ ಆನಂದಿಸುತ್ತಾರೆ. ಅನ್ಯಾಯದ ವಿರುದ್ದ ಹೊರಾಡಲಾಗದ ಮಂದಿ ಅನ್ಯಾಯದ ವಿರುದ್ದ ಹೋರಾಡುವ ನಾಯಕನ ನೋಡಿ ಖುಷಿ ಪಡುತ್ತಾರೆ.  ತಂದೆ ತಾಯಿಗಳನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಟೀವಿಯಲ್ಲಿ ತಂದೆ ತಾಯಿಯ ಪಾತ್ರಗಳನ್ನ ನೋಡಿ ವ್ಯಾಕುಲಗೊಳ್ಳುತ್ತಾರೆ, ಕಣ್ಣೀರು ಸುರಿಸುತ್ತಾರೆ .

ಸಾಮಾನ್ಯ ಜನರಂತೆ ವರ್ತಿಸದ ಕಾರಣಕ್ಕಾಗಿ ಮೀಡ್ ಒಬ್ಬ ಮಾನಸಿಕ ರೋಗಿ ಎಂಬ ತೀರ್ಮಾನಕ್ಕೆ ಬಂದ ಪೋಲಿಸರು ಈ ಕ್ರಮಕ್ಕೆ ಮುಂದಾಗಿರುತ್ತಾರೆ...

--------------------------------------ಮುಕ್ತಾಯ-------- ವಲ್ಲ.........,
  ಒಂದು ಹೊಸ ಕ್ರಾಂತಿಯ ಆರಂಭ. ಎಲ್ಲರೂ ವಾಕಿಂಗ್ ಹೊರಡಿ  ಹಾಗು ವಾಕಿಂಗ್ ಸಂಸ್ಕೃತಿಯನ್ನು ಹರಡಿ. ನಿಮ್ಮ ನಿಮ್ಮ ಭವಿಷ್ಯದ ದಿನಗಳು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳಿ.

Comments

Popular posts from this blog

ಸ್ಪೆಷಾಲಿಟಿ

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.